Sunday 3 February 2013

ಊರೇ ಒಂದು ಕಡೆ, ಇವರಿನ್ನೊಂದು ಕಡೆ !!


Give me blood, I will give you freedom” 

ಜನ ನಾಯಕ ಸುಭಾಶ್ ಚಂದ್ರ ಬೋಸ್ ಅವರ ಈ ಹೇಳಿಕೆ ಅದೆಷ್ಟೋ ಜನರ 
ಮನದಲ್ಲಿ ಸ್ವಾತಂತ್ರ್ಯ ದ ಕಿಚ್ಚು ಹಚ್ಚಿತ್ತು, ಸಾವಿರಾರು ಜನ  ಸ್ವಾತಂತ್ರ್ಯ ಹೋರಾಟ ಕ್ಕಾಗಿ ಬೀದಿಗಿಳಿದರು.  ಇಂದಿನ ನಮ್ಮ ಜನ 
ನಾಯಕರ ಹೇಳಿಕೆ ಗಳು ಅದೆಷ್ಟೋ ಜನರ ಮನದಲ್ಲಿ ಕಿಚ್ಚನ್ನೂ ಹಚ್ಚುತ್ತದೆ ಹಾಗು ಸಾವಿರಾರು ಜನರನ್ನು ಹೋರಾಟಕ್ಕೂ ಇಳಿಸುತ್ತದೆ. 
ವಿಪರ್ಯಾಸವೆಂದರೆ ಈ ಹೋರಾಟ, ನಾಯಕರ ಆ ಹೇಳಿಕೆಯ ವಿರುದ್ಧವೇ ಆಗಿರುತ್ತದೆ. ಇಂತಹ ಹೇಳಿಕೆಯ ಒಂದು ಉದಾಹರಣೆಯೆಂದರೆ ರಾಷ್ಟ್ರಪತಿಯವರ ಪುತ್ರ, ಕಾಂಗ್ರೆಸ್ ಸಂಸದ ಅಭಿಜಿತ್ ಮುಖರ್ಜಿಯವರ ಈ ಹೇಳಿಕೆ "ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರು ವಿದ್ಯಾರ್ಥಿನಿಯರೇ ಅಲ್ಲ,'ನೆಗ್ಗಿಹೋದವರು ಹಾಗು ಬಣ್ಣ ಬಳಿದುಕೊಂಡವರು'".
ಅಭಿಜಿತ್ಅವರ ಈ ಹೇಳಿಕೆ ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮಹಿಳೆಯರ ಹಾಗು ವಿದ್ಯಾರ್ಥಿನಿಯರ ಕುರಿತಾಗಿತ್ತು.  


ಈ ಅವಮಾನಕಾರಿ ಹೇಳಿಕೆ ವಿರುದ್ಧ ಸ್ವತಃ ಅಭಿಜಿತ್ ಅವರ ಸಹೋದರಿ ಶರ್ಮಿಷ್ಟೆ ಮುಖರ್ಜಿಯವರೇ ಗರಂ ಆಗಿದ್ದರು ಹಾಗು ಅಭಿಜಿತ್ ಅವರ ಪರವಾಗಿ ಜನತೆಯ ಕ್ಷಮೆಯನ್ನು ಕೋರಿದರು. ಇನ್ನು ಗ್ಯಾಂಗ್ ರೇಪ್ ಪ್ರಕರಣದಿಂದ ಸಹನೆ ಕಳೆದುಕೊಂಡಿದ್ಡ ಜನತೆಗೆ ಈ ಹೇಳಿಕೆ ಪಿತ್ಥ ನೆತ್ತಿಗೇರುವಂತೆ ಮಾಡಿತ್ತು. ಅಭಿಜಿತ್ ಅವರ ವಿರುದ್ಧ ಪ್ರತಿಭಟನೆಗಳು ಶುರುವಾದವು, ಮಾಧ್ಯಮಗಳು ಖಂಡಿಸಿದವು, ರಾಜಕೀಯ ಮುಖಂಡರು ಟೀಕಿಸಿದರು, ಮಹಿಳೆಯರಂತೂ ಅಬ್ಬರಿಸಿದರು ಈ ಅಬ್ಬರಕ್ಕೆ ಹೆದರೋ(ಅಥವ ಎಚ್ಚರವಾಗೋ) ಅಂತು ಅಭಿಜಿತ್ ಅವರು ತಮ್ಮ ತಪ್ಪನ್ನು ಒಪ್ಪಿ ಮಹಿಳೆಯರ ಕ್ಷಮೆ ಕೋರಿದರು.
ಈ ರೀತಿಯ ಹೇಳಿಕೆಗಳು ನಮ್ಮ ಜನರಿಗೇನು ಹೊಸತಲ್ಲ ಇತ್ತೀಚಿಗೆ ನಮ್ಮ ನಾಡಿನ ಕೆಲವು ಗಣ್ಯ ವ್ಯಕ್ತಿಗಳನ್ನು ಕೊಲ್ಲಲು ಸಿದ್ಧವಾಗಿದ್ದ ಉಗ್ರಗಾಮಿಗಳನ್ನು ಪೋಲೀಸರು ಬಂಧಿಸಿದಾಗ ರಾಜಕೀಯ ಮುಖಂಡ ಎ.ಕೆ.ಸುಬ್ಬಯ್ಯ ನವರು "ಬಂಧಿತರು ಉಗ್ರಗಾಮಿಗಳಲ್ಲ ಅಮಾಯಕರು" ಎಂದಿದ್ದರು.    



ಇನ್ನು ಬಾಟ್ಲಾ ಹೌಸ್ ಪ್ರಕರಣವನಂತ್ತೂ ನಮ್ಮ ರಾಜಕೀಯ ನಾಯಕರು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ಕೊಡಲು ಒಂದು ವೇದಿಕೆಯನ್ನಾಗಿ ರೂಪಿಸಿದ್ದರು. ಈ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರಗಾಮಿಗಳು ಪೋಲೀಸ್ ಎನ್ ಕೌಂಟರ್ ನಲ್ಲಿ ಹತರಾಗಿದ್ದರು. ಈ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದ ದೆಹಲಿಯ ದಕ್ಷ ಪೋಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮರವರು ಹುತಾತ್ಮರಾಗಿದ್ದರು. ದುರದೃಶ್ಟವಶಾತ್, ಪ್ರಾಣದ ಹಂಗು ತೊರೆದು ಹೋರಾಡಿದ ಪೋಲೀಸರ ಹಾಗು ಪ್ರಾಣವನ್ನೇ ತೊರೆದ ಮೋಹನ್ ರವರ ಸಾಹಸ, ಶೌರ್ಯಗಳು ರಾಜಕೀಯ ನಾಯಕರ ಕಣ್ಣಿಗೆ ಕಾಣಲೇ ಇಲ್ಲ. ಬದಲಾಗಿ ಎನ್ ಕೌಂಟರನ್ನು ನಕಲಿ ಎಂದು ಹಾಗು ಇದರ ವಿರುದ್ಧ ನ್ಯಾಯಾಂಗ ತನಿಖೆಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸತೊಡಗಿದರು. ಈ ರೀತಿ ಹೇಳಿಕೆಗಳನ್ನು ಕೊಟ್ಟು 'ಓಟ್ ಬ್ಯಾಂಕ್' ನಾಟಕವಾಡಿದ ಕೆಲವು ಕಾಂಗ್ರೆಸ್ ಹಾಗು ಎಸ್.ಪಿ ನಾಯಕರು ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದರು.  ಈ ಮಧ್ಯೆ ಅಂದಿನ ಗೃಹ ಸಚಿವ ಪಿ.ಚಿದಂಬರಮ್ ಅವರು ಎನ್ ಕೌಂಟರ್ ನಕಲಿಯಲ್ಲ ಅಸಲಿ ಎಂದು ಹೇಳಿದರು ಸಹ ನಾಯಕ ನಟರು(ರಾಜಕೀಯ) ತಮ್ಮ ಪಟ್ಟು ಸಡಿಲಿಸಲಿಲ್ಲ. ಅದರಲ್ಲೂ ಜ್ಯಾತ್ಯತೀತ ನಾಯಕ ನಟ ದಿಗ್ವಿಜಯ್ ಸಿಂಗ್ ಅವರಂತು ತಮ್ಮ ಹೇಳಿಕೆಯಿಂದ ಹಿಂದೆ ಸರಿಯದೇ, ತಾವೇ ಸ್ವತಃ ತನಿಖೆ ನಡೆಸಿದವರಂತೆ ಇದು ನಕಲಿ ಎನ್ ಕೌಂಟರ್ ಎಂದು ಪುನಃ ವಾದಿಸಿಬಿಟ್ಟರು.



ಒಂದು ಸಮಾಧಾನಕರ ವಿಷಯ ಏನೆಂದರೆ, ಈ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ಇನ್ ಸ್ಪೆಕ್ಟರ್ ಮೋಹನ್ ಚಂದ್ ಶರ್ಮರವರಿಗೆ ಆಶೋಕ ಚಕ್ರ ಲಭಿಸಿದ್ದು.


"ಬದಲಾವಣೆ ಜಗದ ನಿಯಮ" ಜಗತ್ತೇ ಬದಲಾಗುತ್ತಿದ್ದರು ರಾಜಕೀಯ ನಾಯಕರು ಮಾತ್ರ ಬದಲಾಗುತ್ತಿಲ್ಲ, ಕಾರಣ? ಅದೇ ಕೆಟ್ಟ "ರಾಜ'ಕಾರಣ'".

No comments:

Post a Comment